ಶ್ರೀನಿವಾಸ .ಎಂ

ರಾಜ್ಯಾಧ್ಯಕ್ಷರು

 

ನನ್ನೆಲ್ಲಾ ಆತ್ಮೀಯ ಈಡಿಗ ಅಧಿಕಾರಿ-ನೌಕರ ಬಾಂಧವರೇ,

“ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ”

ಎನ್ನುವ ಗುರುವಾಣಿಯ ಪ್ರೇರೇಪಣೆಯಂತೆ 2005 ರಲ್ಲೇ ಹಿರಿಯ ಅಧಿಕಾರಿಗಳಾದ ಶ್ರೀ ಜಗದೀಶ್‌ ಪ್ರಸಾದ್‌, ಶ್ರೀ ಶಿವಾನಂದ, ಶ್ರೀ ಮೋಹನ್‌ದಾಸ್‌ ಮತ್ತು ಹಿರಿಯ ಹಲವು ಅಧಿಕಾರಿ-ನೌಕರರ ದೂರ ದೃಷ್ಟಿಯಿಂದ ಹಾಗೂ ಆಸಕ್ತ ಮನಸ್ಸುಗಳ ಸಹಕಾರದಿಂದಾಗಿ ಈ ಸಂಘ ಅಸ್ತಿತ್ವಕ್ಕೆ ಬರುವುದರೊಂದಿಗೆ, ಸುಮಾರು 800 ಜನ ಸದಸ್ಯತ್ವ ಪಡೆದಿದ್ದರು.

ನಿಮ್ಮೆಲ್ಲರ ಸಹಕಾರ ಮತ್ತು ಮಾರ್ಗದರ್ಶನದಂತೆ ಈ ಸಂಘದ ಅಧ್ಯಕ್ಷ ಹುದ್ದೆಯನ್ನು ಸ್ವೀಕರಿಸಿದ ನಂತರ ಒಂದಷ್ಟು ಸಮಾನ ಮನಸ್ಕ ಅಧಿಕಾರಿ-ನೌಕರ ಬಾಂಧವರ ಹಾಗೂ ಹಲವು ಹಿರಿಯ ನಿವೃತ್ತ ಅಧಿಕಾರಿಗಳೊಂದಿಗೆ ಮತ್ತು ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚಿಸಿ, ಸಂಘದ ಸದಸ್ಯ ಬಲವನ್ನು ಹೆಚ್ಚಿಸುವ ಮೂಲಕ ಈಗಾಗಲೇ ಅಸ್ತಿತ್ವದಲ್ಲಿರುವ ಈ ಸಂಘಕ್ಕೆ ಹೊಸತನ, ಹೊಸ ರೂಪುರೇಷೆ ಕೊಡಲು ತೀರ್ಮಾನಿಸಲಾಯಿತು.

ಸಂಘದ ಪ್ರಾದೇಶಿಕ ವ್ಯಾಪ್ತಿಯನ್ನು ನೈಜವಾಗಿ ರಾಜ್ಯಾದ್ಯಂತ ವಿಸ್ತರಿಸಬೇಕು ಎಂಬ ನಿಟ್ಟಿನಲ್ಲಿ, ನಮ್ಮವರಲ್ಲಿ ಒಂದು ಅಂದಾಜಿನಂತೆ, 25000 ಕ್ಕೂ ಹೆಚ್ಚು ಅಧಿಕಾರಿ-ನೌಕರರಿರುವುದರಿಂದ ಅವರೆಲ್ಲರೂ ಸದಸ್ಯತ್ವ ಪಡೆಯುವಂತೆ ಮಾಡುವ ಮೂಲಕ ಸಂಘದ ನಿಜವಾದ ಶಕ್ತಿಯನ್ನು ಪರಿಚಯಿಸಬೇಕು ಎಂದು ಸಂಕಲ್ಪ ಮಾಡಿದ್ದೇವೆ. ಈ ಮೂಲಕ ಇಂತಹ ಸಂಘ ಎಲ್ಲಾ ವಿಧದಲ್ಲೂ, ಎಲ್ಲಾ ರೀತಿಯಲ್ಲೂ ಮಾದರಿ ಮತ್ತು ಪ್ರೇರಣಾಯುತವಾದ ಕಾರ್ಯಗಳನ್ನು ಮಾಡಬೇಕು ಎನ್ನುವ ಗುರಿ ನಿಶ್ಚಯಿಸಿದೆವು.

ಅದಕ್ಕಾಗಿಯೇ ನಮ್ಮ ಸಂಘಕ್ಕೆ, ತನ್ಮೂಲಕ ನಮ್ಮವರ ಅಸ್ತಿತ್ವದಲ್ಲಿರುವ ಎಲ್ಲಾ ರೀತಿಯ ಸಂಘಗಳಿಗೆ ತಿಳಿದಿರುವಂತವರಾದ ನಾವು ನಮ್ಮ ಅಧಿಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘವನ್ನು ಸರಿಯಾದ ದಿಕ್ಕಿನಲ್ಲಿ, ಸರಿಯಾದ ಮಾರ್ಗದಲ್ಲಿ ಮುನ್ನಡೆಸಲು-ನೌಕರ ಬಾಂಧವರ ನಿಸ್ವಾರ್ಥ ಸೇವೆಯ ಅವಶ್ಯಕತೆ ಇದೆ. ಅವರೆಲ್ಲರನ್ನು ಒಟ್ಟುಗೂಡಿಸೋಣ. ಈಡಿಗ ಎಂಬ ಮೂಲ ಹೆಸರಿನಲ್ಲಿ ಬಿಲ್ಲವ, ಪೂಜಾರಿ, ನಾಮಧಾರಿ, ದೀವರು, ಹಳೇಪೈಕ ಮುಂತಾದ 26 ಉಪಪಂಗಡಗಳ ಎಲ್ಲಾ ಅಧಿಕಾರಿ-ನೌಕರರನ್ನು ಒಗ್ಗೂಡಿಸಿ ಬಲಿಷ್ಠ ಸಂಘವನ್ನು ಕಟ್ಟೋಣ. ಈ ಹಿನ್ನೆಲೆಯಲ್ಲಿ ತಮಗೆಲ್ಲಾ ತಿಳಿದಿರುವಂತೆ, ರಾಜ್ಯಾದ್ಯಂತ ಜಿಲ್ಲಾಪ್ರವಾಸ, ತಾಲ್ಲೂಕು ಪ್ರವಾಸ, ನೇರ ಭೇಟಿ, ವಾಟ್ಸಾಪ್‌ಗುಂಪು, ಗೂಗಲ್‌ಮೀಟ್‌ಗಳ ಮೂಲಕ ಚಾಲನೆ ನೀಡಲಾಗಿದೆ. ಈ ಅತ್ಯಲ್ಪ ಅವಧಿಯಲ್ಲೇ ನಮ್ಮಲ್ಲಿ ಇರುವ ಘಟಾನುಘಟಿ ಅಧಿಕಾರಿಗಳು, ಚುರುಕಿನ ಪಾದರಸದಂತೆ ವ್ಯಕ್ತಿತ್ವವುಳ್ಳ ನೌಕರರನ್ನು ಕಂಡಿದ್ದೇನೆ. ಸಂಘದ ಕುರಿತು ತುಡಿತ ಇರುವುದನ್ನು ಮನಗಂಡಿದ್ದೇನೆ.

ಈ ಹಿನ್ನೆಲೆಯಲ್ಲಿ 26 ಉಪಪಂಗಡಗಳು ಬೇರೆ ಬೇರೆ ರೀತಿಯಲ್ಲಿ ಬಲಿಷ್ಠಗೊಂಡಿದ್ದರೂ ಅಥವಾ ಬಲಿಷ್ಠಗೊಳ್ಳದಿದ್ದರೂ ನಮ್ಮೆಲ್ಲರ ಆಶಯ ಎಲ್ಲರೂ ಒಗ್ಗೂಡುವುದೇ ಆಗಿದೆ. “ಸಣ್ಣ ಸಣ್ಣ ಸಮುದಾಯಗಳ  ಪ್ರತ್ಯೇಕತೆಯು ಕ್ಷೇಮಾಭಿವೃದ್ಧಿ ಸಂಘವನ್ನು ದುರ್ಬಲಗೊಳಿಸುತ್ತದೆ, ಆದರೆ ಒಗ್ಗಟ್ಟು ಸಂಘವನ್ನು ಬಲಪಡಿಸುತ್ತದೆ”. ಆ ನಿಟ್ಟಿನಲ್ಲಿ ಎಲ್ಲಾ 26 ಉಪಪಂಗಡಗಳ ಅಧಿಕಾರಿ ನೌಕರರು ಒಂದಾಗುವ ತುರ್ತು ಮತ್ತು ಅನಿವಾರ್ಯತೆ ನಮಗಿದೆ.
ಸಂಘದ ಬೈಲಾವನ್ನು ತಮ್ಮೆಲ್ಲರ ಜೊತೆ ಮುಕ್ತವಾಗಿ ಹಂಚಿಕೊಂಡಂತೆ, ನೌಕರ ಸಂಘಟನೆಯ ವ್ಯಾಪ್ತಿಯಲ್ಲಿ ಹಾಲಿ ಮತ್ತು ನಿವೃತ್ತ ಸರ್ಕಾರಿ ಅಧಿಕಾರಿ-ನೌಕರ ಬಾಂಧವರು, ವಕೀಲರು, ಅಭಿಯಂತರರು, ವೈದ್ಯರು ಮುಂತಾದ ವೃತ್ತಿಪರರನ್ನು ತರಲಾಗಿದೆ.

ಮೊದಲ ಮತ್ತು ಎರಡನೇ ತಲೆಮಾರಿನ ನಾವು ನೌಕರರು ಅಥವಾ ಅಧಿಕಾರಿಗಳಾಗಿರಬಹುದು. ನಮ್ಮ ಮೂರನೇ ತಲೆಮಾರಿನ ನೌಕರರು-ಅಧಿಕಾರಿಗಳ ಮಕ್ಕಳು ಇತ್ತೀಚೆಗೆ ಅಭಿಯಂತರರು, ವೈದ್ಯರು, ವೃತ್ತಿಪರ ಉದ್ಯಮಿಗಳಾಗುತ್ತಿರುವ ಈ ಸಂದರ್ಭದಲ್ಲಿ, ಹೆಚ್ಚುದುಡಿಯುತ್ತಿರುವ ಅವರು ನಮ್ಮ ಸಮಾಜಕ್ಕೆ ಮತ್ತು ಕ್ಷೇಮಾಭಿವೃದ್ಧಿಸಂಘಕ್ಕೆ ಬಹುದೊಡ್ಡ ಆಸ್ತಿಯೇ ಆಗಿರುವುದರಿಂದ ಅವರನ್ನು ಕ್ಷೇಮಾಭಿವೃದ್ಧಿಸಂಘದ ವ್ಯಾಪ್ತಿಗೆ ತರಲಾಗಿದೆ.

ಈಗಿರುವ ಜಿಲ್ಲಾ-ತಾಲೂಕು ನೌಕರರ ಕ್ಷೇಮಾಭಿವೃದ್ಥಿ ಸಂಘಗಳು ಸಾಲದೇ?  ಶ್ರೀನಾರಾಯಣ ಗುರು ಹೆಸರಿನ ಸಂಘಗಳು, ಆರ್ಯ ಈಡಿಗ ಸಂಘ, ಅದರ ಉಪ ಶಾಖೆಗಳು ಇಲ್ಲವೇ? ಸಾಕಲ್ಲವೇ? ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದೀರಿ. ಈಗಾಗಲೇ ಹಾಲಿ ಇರುವ ಎಲ್ಲಾ ಸಂಘಗಳು ಇರುತ್ತವೆ. ಅವು ಹಾಗೆಯೇ ಮುಂದುವರಿಯುತ್ತವೆ. “ಇದು ಅಧಿಕಾರಿ ನೌಕರರ ರಾಜ್ಯ ಮಟ್ಟದ ಸಂಘ”. ರಾಜ್ಯ ಮಟ್ಟದಲ್ಲಿ ಬಲಯುತವಾಗಿ ಪ್ರತಿಧ್ವನಿಸಿ, ಆ ಪ್ರತಿಧ್ವನಿ ರಾಜ್ಯ, ಜಿಲ್ಲೆ, ತಾಲ್ಲೂಕುಗಳಲ್ಲಿ ಮೊಳಗುತ್ತದೆ, ಆದ್ದರಿಂದ ಸಂಘ ಯಾವುದೇ ರೀತಿಯೆ ಆಗಲಿ ಅದು ಸಂಘ. ಆದರೆ ಅದು ನಾಮಕಾವಸ್ತೆಯಾಗದೆ ಕ್ರಿಯಾಶೀಲವಾಗಿ ಸರ್ವರನ್ನು ತೊಡಗಿಸಿಕೊಳ್ಳುವಿಕೆಯಲ್ಲಿ ಇನ್ನಷ್ಟು ಬಲಯುತವಾಗಲಿ ಎಂಬುದು ನಮ್ಮೆಲ್ಲರ ಬಯಕೆ.

ಒಂದು ಸಂಘ ಇನ್ನೊಂದಕ್ಕೆ ಪೂರಕ, ಪ್ರೇರಕ, ಸಹಾಯಕ ಆಗಿರಬೇಕೆ ಹೊರತು ಮಾರಕ ಆಗಬಾರದು

ನಮ್ಮವರಿಗೆ ಹತ್ತು ಹಲವು ವಿಧದಲ್ಲಿ, ಅದಮ್ಯ ಚೈತನ್ಯ ಶಕ್ತಿ ಪರಮಪೂಜ್ಯ ಶ್ರೀ ನಾರಾಯಣ ಗುರುಗಳು. ಅವರು ಅಪ್ರತಿಮ ಸಮಾಜ ಸುಧಾರಕರು, ಸಮಾಜೋದ್ಧಾರಕರು, ಸಾರ್ವತ್ರಿಕವಾಗಿ ಒಪ್ಪಿಗೆಯಾಗಬಲ್ಲವರು. ಗುರುಗಳೇ ನಮಗೆ ನಿಜವಾದ “ಸ್ಫೂರ್ತಿಯ ಮೂರ್ತಿ ”, ಅವರ ಅಡಿಯಲ್ಲಿ ಮತ್ತು ನಾಮಬಲದಲ್ಲಿ ನಾವು ಸಂಘಟಿತರಾಗಬೇಕು.

ಇಂತಹ ಗುರುಗಳು ಬೇರೆಯವರಿಗೇನಾದರೂ ದೊರಕಿದ್ದರೆ ಇದರ ಪರಿಣಾಮ ಬೇರೆಯೇ ಆಗಿರುತ್ತಿತ್ತು . ಆದರೆ ಇತ್ತೀಚೆಗೆ ನಮ್ಮವರಿಗೆ ಅವರ ಮಹತ್ವ ಅರಿವಾಗುತ್ತಿದೆ, ಅವರ ‘ಧೀ: ಶಕ್ತಿ’ ಒಗ್ಗಟ್ಟನ್ನು ಮೂಡಿಸುತ್ತಿದೆ ಮತ್ತು ಸಕಾರಾತ್ಮಕ ಬೆಳವಣಿಗೆ ತಂದಿದೆ. ಹೀಗೆ ಹತ್ತು-ಹಲವು ಹಿನ್ನೆಲೆ, ಸಾಂಸ್ಕ್ರತಿಕ ಬೇರುಗಳನ್ನು ಗಟ್ಟಿಯಾಗಿ ಉಳ್ಳ ನಮ್ಮ ಸಮುದಾಯದ ನೌಕರ ಬಾಂಧವರು ಒಗ್ಗಟ್ಟು ಮತ್ತು ಶಕ್ತಿ ಸಾಮರ್ಥ್ಯವನ್ನು ಸಂಘದ ಮೂಲಕ ತೋರ್ಪಡಿಸಿ, ಎಲ್ಲಾ ಕ್ಷೇತ್ರಗಳಲ್ಲೂ ನಾವು ಸಬಲರಾಗಬೇಕು ಮತ್ತು ಆ ನಿಟ್ಟಿನಲ್ಲಿ ನಮ್ಮವರನ್ನು ಪ್ರೇರೇಪಿಸಬೇಕು.

ನಾವು ಎಷ್ಟೇ ಸಬಲರಾಗಿದ್ದೇವೆಂದರೂ ಅದು ಶೇಕಡಾ 30 ಮಾತ್ರ . ಇನ್ನುಳಿದ ಶೇಕಡಾ 70 ರಷ್ಟು ಇರುವ  ನಮ್ಮ ಬಾಂಧವರು, ನಮ್ಮ ಬಾಂಧವರ ಮಕ್ಕಳು, ಭೂರಹಿತರು, ಕೂಲಿಕಾರ್ಮಿಕರು, ಅತಿ ಸಣ್ಣ ಹಿಡವಳಿದಾರರು, ಹಿನ್ನೆಲೆಯಿಲ್ಲದವರು, ಮುಖ್ಯವಾಹಿನಿಗೆ  ಬರದಿದ್ದವರು ಆಗಿದ್ದಾರೆ.

ಅವರೆಲ್ಲ  ಮುಖ್ಯವಾಹಿನಿಗೆ ಬರುವವರೆಗೆ ಸರ್ಕಾರದ ಯೋಚನೆ, ಯೋಜನೆ. ಪ್ರೋತ್ಸಾಹಧನ, ಅನುದಾನಗಳನ್ನೂ ಅವರತ್ತ ತಿರುಗಿಸಲು, ಅವರಿಗೆ ಸಾಮರ್ಥ್ಯಾಧಾರಿತ ಶಿಕ್ಷಣ, ಸ್ವಾವಲಂಬಿ ಬದುಕು, ಯಾಂತ್ರಿಕ- ವೈಜ್ಞಾನಿಕ ಕೃಷಿ, ಉದ್ಯಮ, ಸಂಘ ಸಂಸ್ಥೆಗಳಲ್ಲಿ ಭೂಮಿಕೆಯನ್ನು ಸಾಧ್ಯವಾಗಬಹುದಾದ ಎಲ್ಲಾ ವಿಧದಲ್ಲೂ ಒದಗಿಸಿ, ಇದನ್ನು ತಮ್ಮೆಲ್ಲರ ಸಹಕಾರ ಸಲಹೆ ಸೂಚನೆಗಳಿಂದ ಸಾಧಿಸಲು ನಾನು ಉತ್ಸುಕನಾಗಿದ್ದೇನೆ.

ನಮ್ಮ ಮುಂದಿರುವ ಸವಾಲುಗಳು

ಸಂಘಟನೆಗಳನ್ನು ಕಟ್ಟುವುದು ಬಹಳ ಸುಲಭ , ಅವುಗಳ ಗುರಿ ಉದ್ದೇಶಗಳು ನಿರಂತರವಾಗಿ ಸಾಕಾರಗೊಳ್ಳಬೇಕಾದರೆ ನಿರಂತರ ಪರಿಶ್ರಮ ಅತ್ಯಗತ್ಯ.. ಈ ನಿಟ್ಟಿನಲ್ಲಿ ಈಡಿಗ ನೌಕರ ಸಂಘ ಸಮುದಾಯದ ಪ್ರಗತಿಯ ಗುರಿ ಉದ್ದೇಶಗಳನ್ನು ಹೊಂದಿದ್ದು ಅವುಗಳ ಸಾಕಾರಕ್ಕೆ ನಿರಂತರ ಪರಿಶ್ರಮ ಅತ್ಯಗತ್ಯವಾಗಿದೆ…

  •  ಶಿಕ್ಷಣ – “ವಿದ್ಯೆಯಿಂದ ಸ್ವತಂತ್ರರಾಗಿ” ಎಂಬ ನಾರಾಯಣ ಗುರುಗಳ ಸಂದೇಶದಂತೆ ಸಮುದಾಯ ಬೆಳವಣಿಗೆಗೆ ಶಿಕ್ಷಣ ಅತ್ಯಗತ್ಯವಾಗಿದೆ. ಸಮಾಜದ ಯಾವುದೇ ಸ್ತರದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾಗಿದೆ. ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಈಗಾಗಲೇ ಮುರಾರ್ಜಿ ದೇಸಾಯಿ, ನವೋದಯ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ, ನಾರಾಯಣಗುರು ವಸತಿ ಶಾಲೆಯಂತಹ ಅನೇಕ ವಸತಿಯುತ ಸಂಸ್ಥೆಗಳನ್ನು ಸ್ಥಾಪಿಸಿದೆ. ನಮ್ಮ ಸಮಾಜದ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ತರಬೇತುಗೊಳಿಸಿ ಈ ವಸತಿ ಶಾಲೆಗಳಿಗೆ ಪ್ರವೇಶ ದೊರಕಿಸುವಂತೆ ಮಾಡುವುದು..  ಪಿ. ಯು. ಸಿ. ಮುಗಿದ ಮಕ್ಕಳಿಗೆ ಸಿಇಟಿ, ನೀಟ್ ,ಐಐಟಿ ,ಗೇಟ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಲು ಸಹಕಾರ ನೀಡುವುದು..
  • ಉದ್ಯೋಗ –  ವಿದ್ಯಾಭ್ಯಾಸದ ನಂತರ ಸಮಾಜದ ಹಾಗೂ ನೌಕರವರ್ಗದ ಮಕ್ಕಳು ನಿರುದ್ಯೋಗಿಗಳಾಗದಹಾಗೆ ಸೂಕ್ತ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಮಾರ್ಗದರ್ಶನ ನೀಡುವುದು.  ಐಟಿಐ, ಪಾಲಿಟೆಕ್ನಿಕ್ ,ಡಾಟಾ ಸೈನ್ಸ್, ಸಾಫ್ಟ್ವೇರ್ ಪ್ರೋಗ್ರಾಮ್ ನಂತಹ  ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡುವುದು…
  • ಆರೋಗ್ಯ –  ಆರೋಗ್ಯವೇ ಮಹಾಭಾಗ್ಯ ಎಂಬಂತೆ ಸರ್ವರಿಗೂ ಆರೋಗ್ಯದಾಯಕ ಬದುಕನ್ನು ರೂಪಿಸಲು ಸಮಾಜದ ಜನರಿಗೆ ಆಯುಷ್ಮಾನ್ ಭಾರತ್, ಯಶಸ್ವಿನಿ ಆರೋಗ್ಯ ಕಾರ್ಡ್, ಕಾರ್ಖಾನೆ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ವಿಮಾ ಸೌಲಭ್ಯಗಳನ್ನ ತಿಳಿಸುವಂತಹ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳುವುದು..  ಸಮಾಜದ  ವೈದ್ಯ ನೌಕರ ಬಂಧುಗಳ ಸಂಘಟನೆಯನ್ನು ಬಲಗೊಳಿಸಿ, ಬಡ ಜನರಿಗೆ ಅನುಕೂಲವಾಗುವಂತಹ ವೈದ್ಯಕೀಯ ಸೌಲಭ್ಯ ನೀಡುವ ನಿಟ್ಟಿನಲ್ಲಿ ಸಹಕಾರ ನೀಡುವುದು. ಸೂಕ್ತ ಆಸ್ಪತ್ರೆಗಳ ಮಾಹಿತಿ ಹಾಗೂ ವೈದ್ಯಕೀಯ ಮರು ವೆಚ್ಚಕ್ಕೆ ಅನುಕೂಲವಾಗುವಂತಹ, ಸರ್ಕಾರಿ ಸೌಲಭ್ಯಗಳನ್ನ ಒದಗಿಸುವ ನಿಟ್ಟಿನಲ್ಲಿ ಸಹಕರಿಸುವುದು..     
  • ರಾಜ್ಯ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಸಮುದಾಯದ ಯುವಕರು ಉದ್ಯೋಗ ಪಡೆಯುವ ನಿಟ್ಟಿನಲ್ಲಿ (ಬ್ಯಾಂಕಿಂಗ್, ರೈಲ್ವೆ  ಇತ್ಯಾದಿ) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ತರಬೇತಿಯ ವ್ಯವಸ್ಥೆ ಮಾಡುವುದು. ಸ್ವಯಂ ಉದ್ಯೋಗ ಕೈಗೊಳ್ಳಲು  ಸಂಬಂಧಿಸಿದ ಇಲಾಖೆ/ ಸಂಸ್ಥೆಗಳಿಂದ ಆರ್ಥಿಕ ಸಹಾಯ, ಬ್ಯಾಂಕ್ ಸಾಲ, ಸಬ್ಸಿಡಿ, ಕೌಶಲ್ಯ ತರಬೇತಿ, ಉದ್ಯಮಶೀಲತೆ ಈ ರೀತಿಯ ಸಹಕಾರಗಳನ್ನು ನೀಡಲು ಹಾಗೂ ಮಾರ್ಗದರ್ಶನ ನೀಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಸರ್ಕಾರದಿಂದ ಬರುವಂತಹ ಪ್ರಧಾನಮಂತ್ರಿ ಆರೋಗ್ಯ ಸೃಜನ ಕಾರ್ಯಕ್ರಮ, ಮುದ್ರಾ ಯೋಜನೆ, ಸ್ವಯಂ ಉದ್ಯೋಗ ತರಬೇತಿ, ಕೌಶಲ್ಯ ತರಬೇತಿ, ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಇಂತಹ ಯೋಜನೆಗಳ ಕುರಿತಾಗಿ ಹೆಚ್ಚು ಪ್ರಚಾರಗೊಳಿಸುವುದು ಹಾಗೂ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳುವುದು. ಸಮುದಾಯದ ಯುವಕರಿಗೆ ಅವರ ವಿದ್ಯಾರ್ಹತೆ ಕೌಶಲ್ಯಕ್ಕೆ ಅನುಗುಣವಾಗಿ ಉದ್ಯೋಗ ಮೇಳಗಳನ್ನು ಆಯೋಜಿಸುವುದು.. 
  • ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆ – ಯಾವ ಸಮುದಾಯ ತನ್ನ ಪರಂಪರೆಯನ್ನು ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ಮುಂದುವರಿಸಿಕೊಂಡು ಹೋಗುವುದಿಲ್ಲವೋ ಆ ಸಮುದಾಯ ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ನಮ್ಮ ಈಡಿಗ ಜನಾಂಗದ ಹಿನ್ನೆಲೆ, ಸಾಂಸ್ಕೃತಿಕ ಪಾರಂಪರೆ, ಸಮುದಾಯದ ಬೆಳವಣಿಗೆ, ಹಿರಿಯರ ಇತಿಹಾಸ, ವಿವಿಧ ಜಿಲ್ಲೆಗಳಲ್ಲಿ ಹರಿದು ಹಂಚಿಹೋಗಿರುವ ಸಮಾಜದ ಒಳಪಂಗಡಗಳ ಸಮನ್ವಯ ಸಾಧಿಸುವಂತಹ ಮಹತ್ವಪೂರ್ಣ  ವಿಷಯಗಳನ್ನು ಸ್ವೀಕರಿಸುವ ಸವಾಲನ್ನು ನೌಕರ ಸಂಘ ಹೊಂದಿದೆ..

ಈ ನಿಟ್ಟಿನಲ್ಲಿ ರಾಜ್ಯದ ಬುದ್ಧಿಜೀವಿಗಳ ವರ್ಗವನ್ನು ಅಣಿಗೊಳಿಸಿ ,ಸೂಕ್ತ ಮಾರ್ಗದರ್ಶನ ಸಹಕಾರದಿಂದ ಮುನ್ನಡೆಯಲು ನೌಕರ ಸಂಘ ಮುಕ್ತ ಮನಸ್ಸು ಹೊಂದಿದೆ..      ಕರ್ನಾಟಕ ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಕೇವಲ ಒಂದೆರಡು ಅಂಶಗಳನ್ನು ಮಾತ್ರ ಗುರಿ ಉದ್ದೇಶಗಳನ್ನಾಗಿ ಇಟ್ಟುಕೊಂಡು ಸ್ಥಾಪಿತವಾಗಿರುವುದಿಲ್ಲ. ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ ಮುಂದಡಿ ಇಡುತ್ತಿದ್ದು ನೌಕರ ಬಂಧುಗಳ ಸಾಕಾರವನ್ನು ಕೋರುತ್ತೇನೆ.. ಮುಂದಿನ ದಿನಮಾನಗಳಲ್ಲಿ ಸಮುದಾಯದ ಬಂಧುಗಳ ಸಹಕಾರದಿಂದ ನೌಕರರ ಸಂಘ ಹೆಮ್ಮರವಾಗಿ ಬೆಳೆದು ಅನೇಕರಿಗೆ ಆಶ್ರಯ ನೀಡುವಂತಹ ಕಲ್ಪವೃಕ್ಷವಾಗಲಿ ಎಂದು ಆಶಿಸುತ್ತೇನೆ…                     

ಇಂತಿ ನಿಮ್ಮವ. 

ಎಂ ಶ್ರೀನಿವಾಸ್