ಈಡಿಗ ಜನಾಂಗಕ್ಕೆ ಐತಿಹಾಸಿಕ / ಪೌರಾಣಿಕ ಹಿನ್ನೆಲೆಯನ್ನು ಹುಡುಕುವ ಪ್ರಯತ್ನಗಳು ನಡೆದಿವೆ. ಈ ಜನಾಂಗದ ಮೂಲವನ್ನು ಮಹಾಭಾರತ, ರಾಮಾಯಣ, ಸ್ಕಂದಪುರಾಣ, ಶಿವಪುರಾಣ, ಮತ್ಸ್ಯಪುರಾಣಗಳಲ್ಲೂ ಗುರುತಿಸಬಹುದು.

ನಮ್ಮದು ಐತಿಹಾಸಿಕವಾಗಿ ಅತ್ಯಂತ ಪ್ರಾಚೀನ ಜನಾಂಗ ಎಂಬ ಆಧಾರಗಳಿವೆ. ಚಂದ್ರಗುಪ್ತ ಮೌರ್ಯ ಚಕ್ರವರ್ತಿ, ಆದಿಶಂಕರಾಚಾರ್ಯ, ಪ್ರತಾಪರುದ್ರ, ಜಗಜ್ಯೋತಿ ಬಸವೇಶ್ವರ, ವಿಜಯನಗರ ಸಾಮ್ರಾಟ, ಚಕ್ರವರ್ತಿ ಔರಂಗಜೇಬ ಮುಂತಾದವರ ಕಾಲದಲ್ಲಿನ ಇತಿಹಾಸದಲ್ಲಿ ಈಡಿಗರ (ಗೌಡ ವಂಶಸ್ಥರ) ಅಸ್ತಿತ್ವ ಮತ್ತು ಮಹತ್ವಗಳ ಬಗ್ಗೆ ಮಾಹಿತಿಗಳನ್ನು ಪತ್ತೆ ಮಾಡಿದ್ದಾರೆ.

ಪುರಾಣ ಮತ್ತು ಇತಿಹಾಸದಲ್ಲಿ ಈಡಿಗರು ಗೌಡ ವಂಶಸ್ಥ ಮೂಲದವರೆಂಬುದು ತಿಳಿದು ಬರುತ್ತದೆ. ಕರ್ನಾಟಕವೂ ಸೇರಿದಂತೆ ದೇಶ ವಿದೇಶಗಳಲ್ಲಿ ಈ ವಂಶಸ್ಥರು ವಿಭಿನ್ನ ಹೆಸರುಗಳಿಂದ ಹಲವಾರು ಗುಂಪುಗಳಾಗಿ ವಿಸ್ತರಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿಯೇ 26 ಪಂಗಡಗಳಾಗಿವೆ. ಪ್ರದೇಶ, ಭಾಷೆ, ಸಂಸ್ಕೃತಿ ಹಾಗೂ ಆಚರಣಾ ವೈವಿಧ್ಯತೆಯಲ್ಲಿ ಈಡಿಗ ಸಮುದಾಯವಿದೆ. ಒಂದು ಅಂದಾಜಿನ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ ಈಡಿಗ ಸಮುದಾಯ 5 ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿನ 26 ಪಂಗಡಗಳಿಗೂ ಸ್ವತಂತ್ರ ಜಾತಿಗಳಿಗಿರುವಂತೆ ತಮ್ಮದೇ ಆದ ಸಂಸ್ಕೃತಿ, ಸಂಸ್ಕಾರ, ಆಚರಣೆಗಳಿದ್ದರೂ, ವಂಶಪಾರಂಪರ್ಯವಾಗಿ ಹರಿದು ಬಂದ ಕಸುಬು ಮಾತ್ರ ಸಮಾನವಾಗಿದೆ. ಇದೇ ಮಾನದಂಡದಿಂದ ಸರ್ಕಾರ ಹಿಂದುಳಿದ ವರ್ಗದವರ ಪಟ್ಟಿಯಲ್ಲಿ ಈಡಿಗ ಜಾತಿಯಲ್ಲಿ 26 ಪಂಗಡಗಳನ್ನು ಸೇರಿಸಿದೆ.

 

ಪ್ರಮುಖ ಮೌಲ್ಯಗಳು:

ಅತ್ರಿ ಮಹರ್ಷಿಯ ಗೌಡಮಂತ್ರದ ಪ್ರಭಾವದ ಮೂಲಕ ಈಡಿಗ ಜಾತಿಯ ಮೂಲ ಪುರುಷನು ಸೃಷ್ಟಿಯಾಗಿರುವ ಕಾರಣ ಇವರಿಗೆ ಗೌಡರು, ಗೌಳರು, ಈಡಿಗರು ಎಂಬ ಹೆಸರು ಬಂತು. ವರುಣನ ಮಗಳಾದ ವಾರುಣಿದೇವಿ (ಸುರೆ) ಇವರ ಕುಲದೇವತೆ. ಅತ್ರಿ ಮಹರ್ಷಿಯು ಗೌಡ ಮಂತ್ರದ ಮೂಲಕ ಕೌಂಡಿನ್ಯನೆಂಬ ಮುನಿಶ್ರೇಷ್ಠನನ್ನು ಸೃಷ್ಟಿಸಿದನು. ಕೌಂಡಿನ್ಯ ಮಹರ್ಷಿಯು ತಂದೆಯ ಆಶೀರ್ವಾದ ಪಡೆದು ತನ್ನ ತಪಶ್ಯಕ್ತಿಯಿಂದ ಫಲ ನೀಡುವ ವೃಕ್ಷಗಳನ್ನೂ, ಗಿಡ ಮೂಲಿಕೆಗಳನ್ನೂ ಸೃಷ್ಟಿಸಿ, ಅದರ ಮಧುರವಾದ ರಸದಿಂದ ಸೋಮರಸವನ್ನು ತಯಾರಿಸಿ ಅದರ ಮೂಲಕ ಮಾನವರ ರೋಗ ಬಾಧೆಗಳನ್ನು ನಿವಾರಿಸಿದನು.ಹೀಗೆ ಈ ಋಷಿ ಶ್ರೇಷ್ಠನೇ ಈಡಿಗ (ಗೌಡ) ವಂಶದ ಮೂಲ ಪುರುಷನಾಗಿ ಈ ಜನಾಂಗದ ಗೋತ್ರವಾದನು (ಕೌಂಡಿನ್ಯ ಗೋತ್ರ). ಮುಂದೆ ಈತನು ಪರಮೇಶ್ವರನನ್ನು ತಪಸ್ಸಿನಿಂದ ಮೆಚ್ಚಿಸಿ ಕಲ್ಪವೃಕ್ಷವನ್ನೂ ಸೃಷ್ಟಿ ಮಾಡುವ ವರವನ್ನು ಪಡೆದನು. ವರ ನೀಡಿದ ಪರಮೇಶ್ವರನು ಕಲ್ಪವೃಕ್ಷ ರಸಪಾನ ಮಾಡಿದವರಿಗೆ ಪುನರ್ಜನ್ಮ ಉಂಟಾಗದಿರಲಿ ಎಂಬ ಅಭಯವನ್ನು ಕರುಣಿಸಿದನು. ಆದಿರುದ್ರನ ಎಡಪಾದದಲ್ಲಿ ಮಧು ಕರ್ಮಣರೆಂಬುವರು ಹುಟ್ಟಿದರು. ಇವರು ಕೂಡ ಈಡಿಗ ವಂಶದ ಮೂಲ ಪುರುಷರೆಂಬ ವ್ಯಾಖ್ಯಾನ ‘ರುದ್ರಭಾರತ’ದಲ್ಲಿದೆ.

ಇನ್ನೊಂದು ಪುರಾಣ ಕಥೆಯ ಪ್ರಕಾರ ಪಾರ್ವತಿ ಪರಮೇಶ್ವರರು ವಿಹಾರಾರ್ಥವಾಗಿ ಭೂಲೋಕಕ್ಕೆ ಬಂದಿಳಿದಿದ್ದರು. ಅದೊಂದು ವೈಶಾಖ ಮಾಸದ ಹುಣ್ಣಿಮೆಯ ದಿನ ಪಾರ್ವತಿಗೆ ತೃಷೆಯಾಗಿತ್ತು. ಸುತ್ತ ಎಲ್ಲೂ ನೀರಿನ ಮೂಲಗಳಿರಲಿಲ್ಲ. ತಾಳೆ, ಈಚಲು ಮರಗಳು ಸೊಗಸಾಗಿ ಬೆಳೆದು ನಿಂತ ಗುಂಪೊಂದು ಕಾಣಿಸಿತು. ಆ ಮರಗಳ ಕಾಂಡದೊಳಗಿನಿಂದ ಸ್ರವಿಸಬಹುದಾದ ರಸದಿಂದ ತೃಷೆ ನೀಗಿಸಿಕೊಳ್ಳಬಹುದೆಂದು ಪಾರ್ವತಿ ಪತಿಯಲ್ಲಿ ವಿನಂತಿಸಿದಳು. ಅದೇ ಸಮಯಕ್ಕೆ ಬಳೆಗಾರ ಬಣಜಿಗನೊಬ್ಬ ಅದೇ ಮಾರ್ಗವಾಗಿ ಬರುತ್ತಿದ್ದ. ಆತನನ್ನು ನೋಡಿದ ಪರಮೇಶ್ವರ, ‘ಅಯ್ಯಾ, ನನ್ನ ಪತ್ನಿ ಬಾಯಾರಿ ಬಹಳ ದಣಿದಿದ್ದಾಳೆ. ಅಲ್ಲಿ ಕಾಣುವ ಮರದ ಕಾಂಡವನ್ನು ಈ ಆಯುಧದಿಂದ ಮೆತ್ತಗೆ ಸೀಳಿ ಅದರಿಂದ ಬರುವ ರಸವನ್ನು ತಂದು ಕೊಡು.ನಿನಗೆ ಪುಣ್ಯ ಲಭ್ಯವಾಗುವುದು’ ಎಂದು ಹೇಳಿ ಒಂದು ಸಣ್ಣ ಚೂಪನೆಯ ಆಯುಧವನ್ನು ಕೊಟ್ಟನು. ಬಳೆಗಾರನು ಈಚಲ ಮರದ ಕಾಂಡದಿಂದ ರಸವನ್ನು ಶೇಖರಿಸಿ ಭಕ್ತಿಯಿಂದ ಪಾರ್ವತಿಗೆ ಅರ್ಪಿಸಿದನು. ಈಚಲ ರಸವನ್ನು ಈಶ್ವರ ಪಾರ್ವತಿಯರಿಬ್ಬರೂ ಸೇವಿಸಿ ಸಂತುಷ್ಟರಾದರು. ನಂತರ ಬಳೆಗಾರನಿಗೆ ‘ನೀನು ಇದೇ ಉದ್ಯೋಗವನ್ನು ಮುಂದುವರಿಸು. ಇದರಿಂದ ನಿನ್ನ ಹಾಗೂ ನಿನ್ನ ಮುಂದಿನ ಪೀಳಿಗೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ’ ಎಂದು ಹರಸಿದರು. ಅಂದಿನಿಂದ ಈಡಿಗರ ವಂಶ ಪ್ರಾರಂಭವಾಯಿತು… ಇದು ಇನ್ನೊಂದು ಪ್ರತೀತಿ. ಈ ಘಟನೆ ಹಾಸನದ ಗೊರೂರು (ಗೊರವರ ಊರು) ಎಂಬಲ್ಲಿ ನಡೆಯಿತು ಎನ್ನುವ ಇನ್ನೊಂದು ಮಾಹಿತಿ “ಕ್ಯಾಸ್ಟ್ ಅಂಡ್ ಟ್ರೈಬ್ಸ್ ಆಫ್ ಸದರನ್ ಇಂಡಿಯಾ” ಎಂಬ ಗ್ರಂಥದಲ್ಲಿದೆ. “ಬ್ರಾಹ್ಮಣೋತ್ಪತ್ತಿ ಮಾರ್ತಾಂಡ” ಗ್ರಂಥದ ಉಲ್ಲೇಖವೊಂದರ ಪ್ರಕಾರ ಜನಮೇಜಯರಾಯನು ವಟೇಶ್ವರ ಮುನಿಯನ್ನು ಆಮಂತ್ರಿಸಿ ಒಂದು ಯಜ್ಞವನ್ನು ಮಾಡಿಸಿದ. ಯಜ್ಞ ಮುಗಿದ ಬಳಿಕ ವಟೇಶ್ವರ ಮುನಿಯು 1888 ಶಿಷ್ಯರುಗಳಿಗೆ ತಲಾ ಒಂದೊಂದು ಗ್ರಾಮದಂತೆ ದಾನ ಮಾಡಿದ. ಇವರೆಲ್ಲ ಆರ್ಯಾವರ್ತದಲ್ಲಿ ನೆಲೆಸಿದರು. ಮುಂದೆ ಇವರೇ ಆದಿಗೌಡರಾದರು ಹಾಗೂ ಇವರೇ ಗೌಡ ವಂಶದ ಮೂಲ ಪುರುಷರು ಎಂಬುದು ಮತ್ತೊಂದು ಐತಿಹ್ಯ. ಇದಲ್ಲದೆ ಮೂಲತಃ ಈಡಿಗರು ಬ್ರಾಹ್ಮಣರಾಗಿದ್ದು ಧರ್ಮವಿರುದ್ಧದ ಆಚರಣೆಗಳನ್ನು ಮಾಡಿರುವ ಕಾರಣ ಬ್ರಾಹ್ಮಣರಿಂದಲೇ ಬಹಿಷ್ಕರಿಸಲ್ಪಟ್ಟರು ಎಂಬುದು ಕೂಡ ಒಂದೆರಡು ಪುರಾಣಗಳಲ್ಲಿ ಕಾಣಿಸುತ್ತದೆ.

ಕಾಟಮಗೌಡನೇ ಕುಲಗುರು: ಕೌಂಡಿನ್ಯ ಮುನಿಯ ವಂಶಸ್ಥರಾದ ಗೋಪವಾಶ್ವ ಮತ್ತು ಕಲ್ಯಾಣಿ ದಂಪತಿಗಳಿಗೆ ಗೋಪಾಲಗೌಡನೆಂಬ ಪುತ್ರ ಸಂತತಿಯಾಯಿತು. ಗೋಪಾಲಗೌಡನು ವೀರಮಾಂಬೆ ಎಂಬ ಕನ್ಯೆಯನ್ನು ವರಿಸಿದನು. ಈ ದಂಪತಿಗಳ ಸುಪುತ್ರನೇ ಕಾಟಮಗೌಡನು. ಶಿವಭಕ್ತನೂ,ದಾನಿಯೂ, ತಪೋನಿರತನು ಆಗಿದ್ದ ಕಾಟಮಗೌಡನೇ ಕಲಿಯುಗದ ಗೌಡವಂಶಕ್ಕೆ ಕುಲಗುರು (ಶಿವತತ್ವಸಾರ –ಶಿವನಂದೀಶ್ವರ ಸಂವಾದ). ಇವನಿಗೆ ಕಂಠಮಯ, ಕಾಟಮಯ, ಕಾಟಮಗೌಡ, ಕಾಟಮಹೇಶ್ವರ ಎಂಬ ಇತರ ಹೆಸರುಗಳೂ ಇವೆ.ಗೋಪಾಲಗೌಡನು ವಿದರ್ಭದ ರಾಜನಾಗಿದ್ದನು.ಶಿವಭಕ್ತನಾದ ಈತನು ಅನೇಕ ವರ್ಷಗಳ ಕಾಲ ರಾಜ್ಯಭಾರ ಮಾಡಿ, ತನ್ನ ವೃದ್ಧಾಪ್ಯದಲ್ಲಿ ಸಂಸಾರ ತ್ಯಾಗ ಮಾಡಿ ಮೋಕ್ಷ ಪ್ರಾಪ್ತಿಗಾಗಿ ಶಿವನನ್ನು ಕುರಿತು ತಪಸ್ಸು ಮಾಡಲು ಹಿಮಾಲಯಕ್ಕೆ ತೆರಳಿದನು.ಗೋಪಾಲಗೌಡನ ಉತ್ತರಾಧಿಕಾರಿಯಾಗಿ ಕಾಟಮಗೌಡನು ಸಿಂಹಾಸನವೇರಿದನು. ಕಾಟಮಗೌಡನು ಕೂಡ ತನ್ನ ರಾಜ್ಯಭಾರದ ಕೈಂಕರ್ಯದ ಜತೆ ತನ್ನ ತಪಶ್ಯಕ್ತಿಯಿಂದ ಕಲಿಯುಗದ ಕಲ್ಪವೃಕ್ಷಗಳೆಂದು ಪ್ರಸಿದ್ಧಿಯಾದ ತಾಳೆ ಮುಂತಾದ ಮರಗಳು ತಾವಾಗಿ ಭೂಮಿಗೆ ತಲೆ ಬಾಗುವಂತೆ ಮಾಡಿ ಅದರಿಂದ ಜನರು ಸೋಮರಸವನ್ನು ತೆಗೆದು ವ್ಯವಹಾರ ನಡೆಸುವ ಕಾಯಕಕ್ಕೆ ಕಾರಣನಾದ.ಕಾಟಮಗೌಡನು ತನ್ನ ಕುಲದ ಮೂಲಪುರುಷನಾದ ಕೌಂಡಿನ್ಯ ಮಹರ್ಷಿಯ ಹೆಸರು ಚಿರಸ್ಥಾಯಿಯಾಗಬೇಕೆಂದು ಹಿಮಾಲಯದಿಂದ ಶಿವಲಿಂಗವನ್ನು ತಂದು, ಮುಕ್ತಾಪುರ (ಈಗಿನ ಅನಂತಪುರ ಜಿಲ್ಲೆಗೆ ಸೇರಿದ ಒಂದು ಗ್ರಾಮ) ಎಂಬಲ್ಲಿ 18 ಆವರಣಗಳುಳ್ಳ ದೇವಸ್ಥಾನವನ್ನು ನಿರ್ಮಾಣ ಮಾಡಿ ಪ್ರತಿಷ್ಠಾಪನೆ ಮಾಡಿದ.ಅಲ್ಲಿಯೇ ಒಂದು ಆಶ್ರಮವನ್ನು ಸ್ಥಾಪಿಸಿ ಅದಕ್ಕೆ ಕೌಂಡಿನ್ಯಾಶ್ರಮವೆಂದು ನಾಮಕರಣ ಮಾಡಿದ. ಕಾಟಮಗೌಡನು ಮುಂದೆ ಇಲ್ಲಿಯೇ ಇದ್ದು ಕಾಟಮ ಮಹೇಶ್ವರ, ಕಾಟಮ ಋಷೀಶ್ವರ ಎಂದು ಪ್ರಸಿದ್ಧನಾದ, ಶಿವಲೀಲಾ ಮಹಾತ್ಮೆ, ಶಿವತತ್ವಸಾರ ಮೊದಲಾದ ಕೃತಿಗಳನ್ನು ರಚಿಸಿದ. ನಂತರ (ವೃದ್ಧಾಪ್ಯದಲ್ಲಿ) ತನ್ನ 3000 ಶಿಷ್ಯರುಗಳನ್ನು ಇದೇ ಆಶ್ರಮದಲ್ಲಿ ಬಿಟ್ಟು ರಾಜ್ಯಭಾರದ ಜವಾಬ್ದಾರಿಯನ್ನು ತನ್ನ ತಂದೆಯ ಕಡೆಯ ಬಂಧುವಾದ ವೀರಭೋಜನಿಗೆ ಒಪ್ಪಿಸಿ ಮೋಕ್ಷಪ್ರಾಪ್ತಿಗಾಗಿ ಹಿಮಾಲಯಕ್ಕೆ ತೆರಳಿದ. (ಈತನ ಕಾಲಮಾನ ಮಹಾಭಾರತದ ಯುದ್ಧ ನಂತರದ ಕಲಿಯುಗದ ಪ್ರಾರಂಭದ ಶತಮಾನವೆಂದು ಕೆಲವು ಗ್ರಂಥಗಳಲ್ಲಿ ಅಭಿಪ್ರಾಯಪಡಲಾಗಿದೆ).

ಈಡಿಗರನ್ನು ಕೃತಯುಗದಲ್ಲಿ ದೇವಗೌಡರೆಂದೂ, ತ್ರೇತಾಯುಗದಲ್ಲಿ ಆದಿ ಗೌಡರೆಂದೂ, ದ್ವಾಪರಯುಗದಲ್ಲಿ ಶಿವಗೌಡರೆಂದೂ, ಕಲಿಯುಗದ ಆದಿಯಲ್ಲಿ ಸತ್ಯಗೌಡರೆಂದು ಕರೆಯುತ್ತಿದ್ದರು. ಆದಿ ಶಂಕರಾಚಾರ್‍ಯ ಮಂಡನಮಿಶ್ರನ ಮನೆಗೆ ಪ್ರವೇಶಿಸುವ ಸಂದರ್ಭದಲ್ಲಿ ಈಡಿಗನೊಬ್ಬನಿಂದ ಗೌಡಮಂತ್ರದ ಉಪದೇಶ ಪಡೆದಿರುವನೆಂದೂ ಐತಿಹ್ಯವಿದೆ. ಇವೆಲ್ಲ ಪುರಾಣೋಕ್ತ ಸಂಗತಿಗಳು. ವೈಜ್ಞಾನಿಕ ದಾಖಲೆಗಳನ್ನು ಆಧರಿಸಿದ ಸಂಗತಿಗಳಲ್ಲ. ನಮಗೂ ಪೌರಾಣಿಕ ಹಿನ್ನೆಲೆ ಇದೆ ಎಂಬುದು ಹೆಮ್ಮೆಪಡುವ ವಿಷಯ.

 

ಚಾರಿತ್ರಿಕ ಹಿನ್ನೆಲೆಗಳು:

ಚಂದ್ರಗುಪ್ತ ಸಾಮ್ರಾಟನ ಕಾಲದಲ್ಲಿ, ಮದ್ಯ (ಸುರೆ) ಸಂಗ್ರಹ ಮಾರಾಟಗಳ ವ್ಯವಸ್ಥಿತ ಜವಾಬ್ದಾರಿಯನ್ನು ನಾರಾಯಣಗೌಡ, ಶಂಕರಗೌಡ, ವಿನಾಯಕ ಗೌಡ ಎಂಬ ಈಡಿಗರಿಗೆ ವಹಿಸಿರುವುದಾಗಿಯೂ, ಈ ಮೂವರು ಚಂದ್ರಗುಪ್ತನ ರಾಜ್ಯದಲ್ಲಿ ಅತ್ಯಂತ ಪ್ರಭಾವಿ ಶ್ರೀಮಂತರೂ, ಸತ್ಯಸಂಧರೂ ಆಗಿದ್ದರು ಎಂಬುದು ಒಂದು ದಾಖಲೆ.

“ಶ್ರೀಕೃಷ್ಣದೇವರಾಯನು ಹಳೆಪೈಕ” ಎಂಬ ಗ್ರಾಮವನ್ನು ಉಂಬಳಿ (ಇನಾಂ) ನೀಡಿರುವ ಬಗ್ಗೆಯೂ ತಿಳಿದು ಬರುತ್ತದೆ (ರಾಜಗೋಪಾಲ ಕೃಷ್ಣರಾಯರ ಕಾಲದಲ್ಲಿ ಇದು ನಡೆಯಿತೆನ್ನಲಾಗಿದೆ). ಪ್ರೌಢದೇವರಾಯನ ಆಳ್ವಿಕೆಯ ಕಾಲದಲ್ಲಿ ರಾಜ್ಯದ ಸೈನ್ಯದಲ್ಲಿ ಈಡಿಗರದೇ ಒಂದು ವಿಭಾಗವಿತ್ತು.

ಇವರನ್ನು ದಂಡು-ಈಡಿಗರೆಂದು ಕರೆಯುತ್ತಿದ್ದರು. ಇವರು ಯುದ್ಧಕಾಲದಲ್ಲಿ ಸೈನ್ಯದ ಜೊತೆ ಸಂಚರಿಸಿ ಹಾಗೂ ಕೇಂದ್ರ ಸ್ಥಾನದಲ್ಲಿರುವಾಗ ಅವರಿಗೆ ಮದ್ಯ ಪೂರೈಕೆಯನ್ನು ಮಾಡುವ ಕರ್ತವ್ಯ ನಿರ್ವಹಿಸುತ್ತಿದ್ದರು. ರಣರಂಗದಲ್ಲಿ ಅಗತ್ಯ ಬಿದ್ದಾಗ ಇತರ ಸೈನಿಕರ ಜತೆ ವೈರಿಗಳ ವಿರುದ್ಧ ಹೋರಾಡುತ್ತಿದ್ದರು. ಹಲವಾರು ಈಡಿಗರು ಸೈನ್ಯದ ಮುಂಚೂಣಿ ಹುದ್ದೆಯಲ್ಲಿಯೂ ಇದ್ದರು. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಕಾಲದಲ್ಲಿ ಹೆಂಡದ ಮಾರಯ್ಯನೆಂಬ ಈಡಿಗನೊಬ್ಬ ಶಿವಶರಣನಾಗಿ ಶಿವತತ್ವ, ಶಿವಲೀಲೆ, ಶಿವಾನುಭವಗಳನ್ನು ಬೋಧಿಸುತ್ತಾ ಬಸವಣ್ಣನವರ ಸಮೀಪವರ್ತಿಯಾಗಿದ್ದ. ಈತನ ಬಗ್ಗೆ ಮಾತ್ರವೇ ಅಧಿಕೃತವಾದ ಆಧಾರಗಳಿವೆ. ಬೆಳಗಾವಿಯಲ್ಲಿ ಜನಿಸಿದ ಸರ್ವಾಯಿ ಪಾಪಣ್ಣನೆಂಬ ಈಡಿಗ ತರುಣರ ತಂಡವೊಂದನ್ನು ಸಂಘಟಿಸಿ ದೇಹದಾರ್ಢ್ಯತೆ, ಯುದ್ಧಕಲೆಗಳನ್ನು ಕಲಿತು, ಮುಸ್ಲಿಂ ರಾಜ್ಯದ ಮೇಲೆ ಆಕ್ರಮಣ ಮಾಡಿ ಸರ್ದಾರ್ ಪಾಪರೆಯನೆಂದು ಬಿರುದು ಪಡೆದಿದ್ದನಂತೆ.

ಕ್ರಿ. ಶ. ೧೬೨೮ ರಲ್ಲಿ ಮೊಗಲ ಚಕ್ರವರ್ತಿ ಔರಂಗಜೇಬನು ಆಂಧ್ರಪ್ರದೇಶದಿಂದ ಹಲವಾರು ಈಡಿಗ ಮುಖಂಡರನ್ನು ತನ್ನ ಆಸ್ಥಾನಕ್ಕೆಬರಮಾಡಿಕೊಂಡು ಅವರಿಂದ ವಿವಿಧ ರೀತಿಯ ಮದ್ಯ ತಯಾರಿಕೆಯ ಶಾಸ್ತ್ರೀಯ ವಿಧಾನಗಳನ್ನು ತಿಳಿದುಕೊಂಡು ಉತ್ತಮ ರೀತಿಯ ಮದ್ಯ ತಯಾರಿಕೆಗೆ ತನ್ನ ರಾಜ್ಯದಲ್ಲಿ ಪ್ರೋತ್ಸಾಹ ನೀಡಿದ್ದನಂತೆ.

ಪುರಾಣ ಮತ್ತು ಇತಿಹಾಸದ ಮಾಹಿತಿಗಳನ್ನು ಗಮನಿಸಿದಾಗ, ಈಡಿಗ, ಹಳೇಪೈಕ, ಬಿಲ್ಲವ, ನಾಮಧಾರಿ, ದೀವರು ಮತ್ತಿತರ ಈಡಿಗ ಜನಾಂಗದ ಪೂರ್ವಜರು ಚತುರ್ವರ್ಣ ದ ಗುಣಾಂಶಗಳನ್ನು ಅಂದರೆ ದಾರ್ಶನಿಕರಾಗಿ ಬ್ರಾಹ್ಮಣತ್ವವನ್ನು, ಸೈನಿಕ ಸೇನಾಧಿಪತಿ ರಾಜರಾಗಿ ಕ್ಷತ್ರಿಯ ಗುಣವನ್ನೂ, ಮದ್ಯ ಮಾರಾಟದ ವ್ಯವಸ್ಥಿತ ಕಾಯಕದ ಮೂಲಕ ವೈಶ್ಯ ಗುಣವನ್ನು, ನಿಸ್ವಾರ್ಥ ಸೇವೆಯ ಮೂಲಕ ಶೂದ್ರ ಗುಣವನ್ನು ಹೊಂದಿ ಸುಮಾರು 12 ನೇ ಶತಮಾನದವರೆಗೆ ಬದುಕಿದರು.

ನಂತರದ ಶತಮಾನಗಳು ಈ ಜನಾಂಗಕ್ಕೆ ದುರಂತಗಳನ್ನೇ ತಂದೊಡ್ಡಿತು. ಅವಿದ್ಯೆ, ಅಜ್ಞಾನ, ಮೂಢನಂಬಿಕೆ ಹಾಗೂ ಇತರ ಮೇಲುವರ್ಗದವರ ಹಿತಾಸಕ್ತಿಗಳಿಗೆ ಬಲಿಯಾಗಿ ಶೋಷಣೆಗೆ ಗುರಿಯಾಯಿತು.

 

ಜಾಗೃತಿಯ ಪ್ರಯತ್ನಗಳು:

ಕ್ರಿ.ಶ. 1854 ರಲ್ಲಿ ಕೇರಳದ ತಿರುವನಂತಪುರದ ಚೆ೦ಬಳ೦ತಿ ಎಂಬ ಹಳ್ಳಿಯ ಈಳವ ಕುಟುಂಬದಲ್ಲಿ ನಾರಾಯಣ ಗುರುಗಳ ಜನನವಾಯಿತು. ಇವರು ಮಾಡಿದ ಆಧ್ಯಾತ್ಮಿಕ ತಳಹದಿಯ ಸಾಮಾಜಿಕ ಸುಧಾರಣೆಗಳು ಬಿಲ್ಲವ ಜನಾಂಗದ ಅಭ್ಯುದಯಕ್ಕೆ ನಾಂದಿಯಾಯಿತು. 1904 ರಲ್ಲಿ ಗುರುಗಳು ಮಂಗಳೂರಿನ ಕುದ್ರೋಳಿ ಎಂಬಲ್ಲಿ ಈಡಿಗ, ಬಿಲ್ಲವ, ನಾಮಧಾರಿ ಮತ್ತು ಇತರೆ ದೇವಸ್ಥಾನಕ್ಕೆ ಪ್ರವೇಶವಿಲ್ಲದವರಿಗಾಗಿ ಒಂದು ದೇವಸ್ಥಾನಕ್ಕೆ ಶಂಕುಸ್ಥಾಪನೆ ಮಾಡಿ ಅದು ಪೂರ್ಣಗೊಂಡಾಗ 1912 ರಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿದರು. ಇದು ಅಸ್ಪೃಶ್ಯರೆಲ್ಲರಿಗೂ ಮುಕ್ತ ಪ್ರವೇಶವಿರುವ ಕರ್ನಾಟಕದ ಪ್ರಪ್ರಥಮ ದೇವಸ್ಥಾನವಾಯಿತು. ಅದು ಇಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವಾಗಿ ಹೆಸರಾಗಿದೆ. 1904 ರಲ್ಲಿ ಸಮಾಜ ಸಂಘಟನೆಯ ಅಂಕುರಾರ್ಪಣೆ ಕಡಲತೀರದಲ್ಲಿ ಪ್ರಾರಂಭವಾದರೆ 1910 ರ ಸುಮಾರಿಗೆ ರಾಜ್ಯದ ಉತ್ತರ ಭಾಗವಾದ ಬಳ್ಳಾರಿಯಲ್ಲಿ ಇದು ಪ್ರಾರಂಭವಾಯಿತು.

1910-11 ರಲ್ಲಿ ರಾವ್ ಸಾಹೇಬ ಕಣೇಕಲ್ ನೆಟ್ಟಕಲ್ಲಪ್ಪನವರ ಮುಂದಾಳತ್ವದಲ್ಲಿ ಜನಾಂಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ವಿದ್ಯಾರ್ಥಿನಿಲಯ 1914 ರಲ್ಲಿ ಸ್ಥಾಪನೆಗೊಂಡಿತು. ಪಿ. ಎನ್. ಗೌಡರ ನಾಯಕತ್ವದಲ್ಲಿ 1927 ರಲ್ಲಿ ಕರ್ನಾಟಕ ಆಂಧ್ರ ಈಡಿಗ ಸಮಾವೇಶ ನಡೆದು ಸಂಘಟನಾ ಕಾರ್ಯಕ್ಕೆ ಚಾಲನೆ ದೊರೆಯಿತು. 1944-45 ರಲ್ಲಿ ಕೆ. ಎನ್. ಗುರುಸ್ವಾಮಿಯವರ ಮುಂದಾಳುತನದಲ್ಲಿ ಬೆಂಗಳೂರಿನಲ್ಲಿ ಈಡಿಗರ ಸಂಘಟನೆಗೆ ಚಾಲನೆ ಲಭಿಸಿತು. ಅದರಂತೆ ಬೆಂಗಳೂರಿನ ಚಿಕ್ಕಮಾವಳ್ಳಿಯಲ್ಲಿ ಒಂದು ವಿದ್ಯಾರ್ಥಿನಿಲಯವೂ ಪ್ರಾರಂಭವಾಯಿತು.

ಆ ಕಾಲಕ್ಕೆ ಬಳ್ಳಾರಿ ಮೂಲದ ಆಗರ್ಭ ಶ್ರೀಮಂತರಾಗಿದ್ದ ಶ್ರೀ ಕೆ. ಎನ್. ಗುರುಸ್ವಾಮಿಯವರು, ಚಿಕ್ಕಜೋಗಿಹಳ್ಳಿಯ ಮೂಲದ ಶ್ರೀ ಕೆ.ವೆಂಕಟಸ್ವಾಮಿಯವರ ಜೊತೆ ಸೇರಿ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ವಿದ್ಯಾರ್ಥಿನಿಲಯದ ಸ್ಥಾಪನೆಗೆ ಕಾರಣರಾದರು. 1958 ರ ನವೆಂಬರ್ 9 ಮತ್ತು 10 ರಂದು ಬೆಂಗಳೂರಿನಲ್ಲಿ ಈಡಿಗರ ಬೃಹತ್ ಸಮ್ಮೇಳನ ಜರುಗಿತು. ಈ ಸಮ್ಮೇಳನವನ್ನು ಅಂದಿನ ರಾಜಪ್ರಮುಖ ಜಯಚಾಮರಾಜೇಂದ್ರ ಒಡೆಯರ್ ಉದ್ಘಾಟಿಸಿದರು. ಚರಿತ್ರಾರ್ಹವಾದ ಈ ಸಮ್ಮೇಳನದಲ್ಲಿ ರಾಜ್ಯದಾದ್ಯಂತ ಈಡಿಗ, ಬಿಲ್ಲವ, ನಾಮಧಾರಿ, ದೀವರು, ಈಳಿಗ ಮುಂತಾಗಿ ಕರೆಸಿಕೊಳ್ಳುತ್ತಿದ್ದ ಎಲ್ಲಾ 26 ಪಂಗಡಗಳೂ ಸಮಾನವೆಂದೂ, ಎಲ್ಲಾಗುಂಪುಗಳಿಗೂ ಈಡಿಗ ಸಂಘವೇ ಕೇಂದ್ರವೆಂದು ಘೋಷಣೆಯಾಯಿತು. ಈಡಿಗ ಸಂಘಕ್ಕೆ ಮೈಸೂರು ಪ್ರದೇಶ ಆರ್ಯ ಈಡಿಗ ಸಂಘವೆಂದು ಮರುನಾಮಕರಣವಾಯಿತು. ಮುಂದೆ 1961 ರಲ್ಲಿ ಮೈಸೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಶ್ರೀ ನಾರಾಯಣ ಗುರುಗಳ ಶಿಷ್ಯರೂ ಕೇರಳ ರಾಜ್ಯದ ಆಗಿನ ಮುಖ್ಯಮಂತ್ರಿಯೂ ಆಗಿದ್ದ ಆರ್. ಶಂಕರನ್ ಅತಿಥಿಯಾಗಿ ಆಗಮಿಸಿದ್ದರು.

1995 ರಲ್ಲಿ ಬೆಂಗಳೂರಿನ ಅರಮನೆ ಆವರಣದಲ್ಲಿ ಎಚ್.ಆರ್.ಬಸವರಾಜು ಅವರ ನೇತೃತ್ವದಲ್ಲಿ ಸಮಾಜದ ಮೂರನೇ ಮಹಾಸಮ್ಮೇಳನ ನಡೆಯಿತು.

ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಸಂಸ್ಥಾಪಕರು ಹಾಗೂ ಅಧ್ಯಕ್ಷರು:

ಕೆ ಎನ್ ಗುರುಸ್ವಾಮಿ

ಕೆ ವೆಂಕಟಸ್ವಾಮಿ

ಎಚ್ ಆರ್ ಬಸವರಾಜು

ಡಿ ದಾಸಪ್ಪ

ಜೆ ಪಿ ನಾರಾಯಣ ಸ್ವಾಮಿ

ಡಾ.ಎಂ ತಿಮ್ಮೇಗೌಡ